ಕಾರ್ಕಳ : ಜಗತ್ತಿನಾದ್ಯಂತ ಲಯನ್ಸ್ ಅಭಿಯಾನದ ಆಶಯ ಸಮಾಜ ಸೇವೆಯೇ ಆಗಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಅವರು ಹೇಳಿದರು. ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಕ್ಲಬ್ ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮಾತನಾಡಿದರು. ವಿವಿಧ ಸಮಾಜ ಸೇವಾ ಕೊಡುಗೆಗಳಾದ ಶಿರ್ಡಿ ಸಾಯಿಬಾಬ ಮಂದಿರದ ಬಳಿ ಉದ್ಯಾನವನದ ಶಿಲನ್ಯಾಸ, ಸರಕಾರಿ ಆಸ್ಪತ್ರೆಗೆ 21 ಗೋಡೆ ಗಡಿಯಾರ ನೀಡಲಾಯಿತು. ಸ್ಥಾಪನೆಯ ಐದು ತಿಂಗಳಲ್ಲೇ ಈ ಕ್ಲಬ್ ಬಹುಮುಖಿ ಸೇವಾ ಕಾರ್ಯಗಳಿಂದ ಗಮನ ಸೆಳೆದಿದೆ ಎಂದರು.
ಯೋಗಿನಿ ವಿಶ್ವನಾಥ ಶೆಟ್ಟಿ ಅವರು ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು. ಲಯನ್ಸ್ ಅಧ್ಯಕ್ಷೆ ಜ್ಯೋತಿ ರಮೇಶ್ ಆಚಾರ್ಯ ಸ್ವಾಗತಿಸಿದರು. ಎ. ಸಿ. ಎಫ್. ಸತೀಶ್ ಮುಖ್ಯ ಅತಿಥಿಯಾಗಿದ್ದರು. ಕ್ಲಬ್ ಪ್ರವರ್ತಕ ಚಂದ್ರಹಾಸ ಸುವರ್ಣ ಪ್ರಾಸ್ತಾವನೆಗೈದರು.
ಅಂತರಾಷ್ಟ್ರೀಯ ಕ್ರೀಡಾಪಟು ವಿದ್ಯಾ ಪೈ, ಯಕ್ಷಗಾನ ಕ್ಷೇತ್ರದಲ್ಲಿ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೆ. ವಸಂತ್, ಧಾರ್ಮಿಕ ಕ್ಷೇತ್ರದ ಶೈಲಜಾ, ರ್ಯಾಂಕ್ ವಿದ್ಯಾರ್ಥಿನಿ ಗಾಯತ್ರಿ ಆಚಾರ್ಯ ಅವರನ್ನು ಗುರುತಿಸಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರನ್ನು ವಿಶ್ವನಾಥ್ ಶೆಟ್ಟಿ ಹಾಗೂ ಲಯನ್ಸ್ ಕಾರ್ಕಳ ಸಿಟಿ ತಂಡ ಗೌರವಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸಪ್ನಾ ಸುರೇಶ್, ಕೋಶಾಧಿಕಾರಿ ಜಯಪ್ರಕಾಶ್ ಭಂಡಾರಿ, ಪ್ರಾಂತೀಯ ಅಧ್ಯಕ್ಷ ಮಿಥುನ್ ಆರ್. ಹೆಗ್ಡೆ, ವಲಯಾಧ್ಯಕ್ಷ ಸುಭಾಷ್ ಸುವರ್ಣ, ಕೋಶಾಧಿಕಾರಿ ವನಿತಾ ವಿಶ್ವನಾಥ್ ಉಪಸ್ಥಿತರಿದ್ದರು. ಗಂಗಾಧರ ನಿರೂಪಿಸಿ, ಶ್ರೀಸ್ತುತಿ ಪ್ರಾರ್ಥಿಸಿದರು. ವಿಜೇಶ್ ಶೆಟ್ಟಿ ಧ್ವಜವಂದನೆ ಗೈದರು. ಕಾರ್ಯದರ್ಶಿ ಪ್ರವಿಣ್ ಸುವರ್ಣ ವಂದಿಸಿದರು.