ಕಾರ್ಕಳ : ಕಂದಾಯ ಮತ್ತು ಸರ್ವೆ ಇಲಾಖೆಯಲ್ಲಿ ಯಾವುದೇ ಕಡತಗಳ ವಿಲೇವಾರಿಯಾಗುತ್ತಿಲ್ಲ. ವರ್ಷಗಟ್ಟಲೇ ಕಡತವಿಟ್ಟುಕೊಂಡು ಜನಸಾಮಾನ್ಯರು ಅಲೆದಾಟ ಮಾಡಬೇಕಿದೆ. ಕಾರ್ಕಳ ಹೆಬ್ರಿ ಉಭಯ ತಾಲೂಕಿಗೆ ಒಬ್ಬರೇ ತಹಶೀಲ್ದಾರ್ ಇರುವುದರಿಂದ ಅವರ ಮೇಲೆ ಅಧಿಕ ಒತ್ತಡವಿದೆ. ಹೀಗಾಗಿ ಜನರ ಕೆಲಸ ಕಾರ್ಯಗಳು ಸಹಜವಾಗಿ ವಿಳಂಬವಾಗುತ್ತಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಹೇಳಿದರು.
ಬಿಜೆಪಿಯ ಕಾರ್ಯಕರ್ತರನ್ನು ಕೂರಿಸಿಕೊಂಡು ತಹಶೀಲ್ಧಾರ್ ಕಡತ ವಿಲೇವಾರಿ ಮಾಡುತ್ತಾರೆ. ಹಾಗಾದರೇ ತಾಲ್ಲೂಕು ಕಚೇರಿ ಯಾಕೆ, ತಾಲ್ಲೂಕು ಕಚೇರಿಯನ್ನೇ ಬಿಜೆಪಿ ಕಚೇರಿ ಮಾಡಿಕೊಳ್ಳಲಿ ಎಂದು ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಕಚೇರಿಯಲ್ಲಿ ಕಮೀಷನ್ ಕೊಟ್ಟರೆ ಮಾತ್ರ ಕೆಲಸ ಆಗುತ್ತಿದೆ. ಬಿಜೆಪಿ ಪಕ್ಷದ ಕಾರ್ಯಕರ್ತರೇ ಮಧ್ಯವರ್ತಿಗಳಾಗಿ ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡಿಸಿಕೊಡುತ್ತಾರೆ. ಭ್ರಷ್ಟಾಚಾರ ತುಂಬಿ ಹೋಗಿದೆ, ಹಣ ಕೊಟ್ಟರೇ ಮಾತ್ರ ಕೆಲಸ ಎಂಬ ಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ವಜಾ ಮಾಡಲಿ ಎಂದು ಗುರುವಾರ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಪೂಜಾರಿ ಆಗ್ರಹಿಸಿದರು.
ಒಳ್ಳೆಯ ಕಾರ್ಯ
ಹೆಬ್ರಿ ಮತ್ತು ಕಾರ್ಕಳ ತಾಲೂಕು ಕಚೇರಿಯಲ್ಲಿ ಸಚಿವ ಸುನಿಲ್ ಕುಮಾರ್ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡಲು ಅಭಿಯಾನ ನಡೆಸುತ್ತಿರುವುದು ಉತ್ತಮ ವಿಚಾರ. ಆದರೆ, ಕಡತಗಳನ್ನು ಬಾಕಿ ಇರಿಸುವುದು ಯಾಕೆ ? ಅಧಿಕಾರಿಗಳೇ ಕಡತವನ್ನು ಬಾಕಿ ಇರಿಸಿಕೊಳ್ಳುತ್ತಾರೋ ಅಥವಾ ಜನಪ್ರತಿನಿಧಿಗಳು ಕಡತ ಬಾಕಿ ಇಡಲು ಹೇಳುತ್ತಾರೋ ಎಂಬುದು ಬಹಿರಂಗವಾಗಬೇಕು, ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಶೀಘ್ರ ಕಡತ ವಿಲೇವಾರಿಗೆ ಆರಂಭಿಸಿದ ಸಕಾಲ ಯೋಜನೆ ಕಾಲವಾಯಿತೇ ಪ್ರಶ್ನಿಸಿದ್ದಾರೆ.
ಬಿಜೆಪಿ ಚೆಲ್ಲಾಟವಾಡುತ್ತಿದೆ ನೀರೆ ಕೃಷ್ಣ ಶೆಟ್ಟಿ
ಭೂಮಿ, ಮನೆ, ನೀರು ಜನರ ಬದುಕಿನ ಪ್ರಮುಖ ವಿಚಾರ. ಬಿಜೆಪಿ ಸರಕಾರ ಜನರಿಗೆ ಒಂದೇ ಒಂದು ಉಪಯೋಗವಾಗುವ ಕೆಲಸ ಮಾಡುತ್ತಿಲ್ಲ, ಧರ್ಮದ ಹೆಸರಿನಲ್ಲಿ ಮನೆ-ಮನ ಒಡೆದು ಆಳುತ್ತಿದೆ ಬಿಜೆಪಿ ಸಾಧನೆ. ಧರ್ಮದ ಹೆಸರಿನ ಅಪಪ್ರಚಾರವೇ ಬಿಜೆಪಿಯ ಮತ ಪಡೆಯುವ ತಂತ್ರ. ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಮುಂದಿನ ಚುನಾವಣೆ ವಿಚಾರವಾಗಲಿದೆಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಬ್ಬಿನಾಲೆ ರಂಜನಿ ಹೆಬ್ಬಾರ್, ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಸುರೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಚ್. ಜನಾರ್ಧನ್, ಪ್ರಮುಖರಾದ ಗುಳ್ಕಾಡು ಭಾಸ್ಕರ ಶೆಟ್ಟಿ, ಶಶಿಕಲಾ ದಿನೇಶ್ ಪೂಜಾರಿ, ವಿಶು ಕುಮಾರ್ ಮುದ್ರಾಡಿ, ಸುಂದರ ಶಿರೂರು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.