ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳನ್ನು 2022-23ನೇ ಸಾಲಿನ ವಿಶ್ವ-ಸಂಸ್ಥೆಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ(ಯುನೆಸ್ಕೊ)ಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡಿದೆ.
ಕೇಂದ್ರ ಸರ್ಕಾರ ಯುನೆಸ್ಕೊಗೆ ಶಿಫಾರಸು ಮಾಡಿರುವ ಅಂತಿಮ ಪಟ್ಟಿಯಲ್ಲಿ ಬೇಲೂರಿನ ಚನ್ನಕೇಶವ, ಹಳೇಬೀಡಿನಲ್ಲಿರುವ ಹೊಯ್ಸಳೇಶ್ವರ ಹಾಗೂ ಸೋಮನಾಥಪುರದಲ್ಲಿರುವ ಕೇಶವ ದೇಗುಲಗಳನ್ನು ಸೇರಿಸಿದೆ.
ಮೂರೂ ಕಡೆ ಹೊಯ್ಸಳ ಅರಸರು ಹಲವು ದೇವಾಲಯಗಳನ್ನು ನಿರ್ಮಿಸಿದ್ದು, ಇವು ಕರ್ನಾಟಕದ ಕಲೆ, ವಾಸ್ತುಶಿಲ್ಪ, ಸಂಸ್ಕೃತಿಯ ಪ್ರತೀಕವಾಗಿವೆ. ‘ಹೊಯ್ಸಳರ ಪವಿತ್ರ ತಾಣಗಳು’ ಎಂಬ ಹೆಸರಿನಲ್ಲಿ ನಾಮಾಂಕಿತ ಮಾಡಲಾಗಿದೆ. 2015ರಿಂದಲೂ ಈ ಮೂರು ದೇವಾಲಯಗಳು ತಾತ್ಕಾಲಿಕ ಪಟ್ಟಿಯಲ್ಲಿದ್ದು, ಈಗ ಅವುಗಳನ್ನು ಕಾಯಂ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಮನವಿ ಮಾಡಿದೆ.
ಯುನೆಸ್ಕೊದ ಭಾರತದ ಕಾಯಂ ಪ್ರತಿನಿಧಿಯಾಗಿರುವ ವಿಶಾಲ್ ವಿ. ಶರ್ಮಾ ಅವರು ಔಪಚಾರಿಕವಾಗಿ ಯುನೆಸ್ಕೊಗೆ ಭಾರತದ ಪಟ್ಟಿ ನೀಡಿದ್ದಾರೆ. ಮುಂದಿನ ಹಂತದಲ್ಲಿ ವಿಶ್ವ ಪಾರಂಪರಿಕ ಕೇಂದ್ರದ ತಾಂತ್ರಿಕ ಸಮಿತಿಯು ಪಟ್ಟಿಯನ್ನು ಪರಿಶೀಲನೆ ನಡೆಸಿ, ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.