ಬೆಂಗಳೂರು: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ. ಸಿ. ನಾಗೇಶ್, ಬೆಂಗಳೂರಿನಲ್ಲಿ 1ನೇ ತರಗತಿಯಿಂದ 9ನೇ ತರಗತಿಯ ವರೆಗೆ ಶಾಲೆ ತೆರೆಯಲು ತಜ್ಞರೊಂದಿಗೆ ಚರ್ಚಿಸಲಾಗುತ್ತಿದ್ದು, ಅವರ ಸಲಹೆ ಮೇರೆಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಶಾಲೆ ಪ್ರಾರಂಭಿಸಿದ ನಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಆದ್ಯತೆ ಎಂದರು.
ಈ ವರ್ಷ ಮಕ್ಕಳಿಗೆ ಹಾಜರಾತಿ ಕಡ್ಡಾಯವಲ್ಲ. ಯಾವುದೇ ಮಕ್ಕಳಿಗೂ ಶಾಲೆಗೆ ಬರಲು ಒತ್ತಾಯ ಮಾಡಲಾಗುವುದಿಲ್ಲ. ಪರೀಕ್ಷೆಗೂ ಶೇಕಡ.75 ಹಾಜರಾತಿ ಕಡ್ಡಾಯ ಮಾಡುವುದಿಲ್ಲ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯುತ್ತದೆ. ಪೂರ್ಣ ಪ್ರಮಾಣದ ಆಫ್ಲೈನ್ ತರಗತಿ ಪ್ರಾರಂಭ ಆಗುವವರೆಗೂ ಚಂದನ, ಆಕಾಶವಾಣಿಯಲ್ಲಿ ಪಾಠ-ಪ್ರವಚನಗಳು ಮುಂದುವರೆಯುತ್ತದೆ ಎಂದು ನಾಗೇಶ್ ಭರವಸೆ ನೀಡಿದ್ದಾರೆ.
ಆದ್ದರಿಂದ ಇಂದಿನ ಕ್ಯಾಬಿನೆಟ್ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ತಜ್ಞರು ಸಮ್ಮತಿಸಿದರೆ ಸೋಮವಾರದಿಂದ ಶಾಲೆ ಆರಂಭ ಮಾಡುತ್ತೇವೆ. ಕೋವಿಡ್ ಮೂರನೇ ಅಲೆಯಿಂದ ಯಾವ ವಿದ್ಯಾರ್ಥಿಗೂ ಹೆಚ್ಚಿನ ತೊಂದರೆ ಆಗಿಲ್ಲ. ಆದರೂ ಸಹ ಆರೋಗ್ಯ ವಿಚಾರದಲ್ಲಿ ಶಿಕ್ಷಣ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಆರೋಗ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.