ಕಾರ್ಕಳ : ಈಚರ್ ಟೆಂಪೋವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರೆ ರಸ್ತೆಗೆಸೆಯಲ್ಪಟ್ಟು ಸಾವಿಗೀಡಾದ ಘಟನೆ ಶಿವತಿಕೆರೆ ಪೆಟ್ರೋಲ್ ಬಂಕ್ ಎದುರುಗಡೆ ರಸ್ತೆ ವಿಭಾಜಕದ ಬಳಿ ಜ. 25ರಂದು ಸಂಭವಿಸಿದೆ. ಮೂಲತಃ ಹಿರಿಯಂಗಡಿರಾಗಿದ್ದ ಮುಂಬೈಯಲ್ಲಿ ನೆಲೆಸಿರುವ ಜಯಂತಿ ರಾವ್ (70) ಎಂಬವರೇ ಸಾವಿಗೀಡಾದ ಮಹಿಳೆ. ಹಿರಿಯಂಗಡಿಯ ಅಭಿಜಿತ್ ರಾವ್ ತನ್ನ ಬೈಕ್ನಲ್ಲಿ (KA-20-EV-0636) ತನ್ನ ಅಜ್ಜಿ ಜಯಂತಿ ರಾವ್ ಅವರನ್ನು ಬೈಕ್ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಾಸು ತನ್ನ ಮನೆಗೆ ಹೋಗುವಾಗ ಈಚರ್ ( KA-12-9819) ಜಯಂತಿ ರಾವ್ ಅವರ ಕಾಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಸ್ವರೂಪದ ಗಾಯವಾಗಿದೆ. ಗಾಯಾಳಿಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ಜ. 26ರ ಮುಂಜಾನೆ ಕೊನೆಯುಸಿರೆಳೆದರು. ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಹಿರಿಯಂಗಡಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಜಯಂತಿ ರಾವ್ ಅವರು ಅತ್ಯಂತ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು. ಇದೀಗ ಅವರ ಹಠಾತ್ ಸಾವು ಕುಟುಂಬ ವರ್ಗ, ಬಂಧು ಮಿತ್ರರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.