ಹೊಸದಿಲ್ಲಿ: ತಮಿಳುನಾಡಿನ ಕೂನೂರು ಸಮೀಪ ಸಂಭವಿಸಿದ ಭೀಕರ ಹೆಲಿಕಾಫ್ಟರ್ ಅಪಘಾತದಲ್ಲಿ ದೇಶದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ನಿಧನರಾಗಿದ್ದಾರೆ. ಬಿಪಿನ್ ರಾವತ್ ಅವರ ಆಘಾತಕಾರಿ ನಿಧನವನ್ನು ಭಾರತೀಯ ವಾಯುಪಡೆ ಟ್ವಿಟ್ಟರ್ನಲ್ಲಿ ಖಚಿತಪಡಿಸಿದೆ.
ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸ್ಟಾಫ್ ಕೋರ್ಸ್ನ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಅಧಿಕಾರಿಗಳಿಗೆ ಉಪನ್ಯಾಸ ನೀಡಲು ವೆಲ್ಲಿಂಗ್ಟನ್ನ (ನೀಲಗಿರಿ ಹಿಲ್ಸ್) ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ಭೇಟಿ ನೀಡುವ ಸಲುವಾಗಿ ತೆರಳುತ್ತಿದ್ದರು ಎಂದು ಐಎಎಫ್ ಟ್ವೀಟ್ ಮಾಡಿದೆ.
ಬುಧವಾರ ಮಧ್ಯಾಹ್ನದ ಸುಮಾರಿಗೆ ಸಿಡಿಎಸ್ ಮತ್ತು ಇತರೆ 9 ಪ್ರಯಾಣಿಕರೊಂದಿಗೆ ನಾಲ್ವರು ಸಿಬ್ಬಂದಿಯಿದ್ದ ಐಎಎಫ್ನ Mi 17 V5 ಹೆಲಿಕಾಪ್ಟರ್ ತಮಿಳುನಾಡಿನ ಕೂನೂರು ಸಮೀಪ ಭೀಕರ ಅಪಘಾತಕ್ಕೀಡಾಗಿತ್ತು.
ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಹೆಲಿಕಾಪ್ಟರ್ನಲ್ಲಿದ್ದ 11 ಇತರರು ಈ ದುರದೃಷ್ಟಕರ ಘಟನೆಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿರುವ ಡಿಎಸ್ಎಸ್ಸಿಯ ಡೈರೆಕ್ಟಿಂಗ್ ಸ್ಟಾಫ್, ಕ್ಯಾಪ್ಟನ್ ವರುಣ್ ಸಿಂಗ್ ಎಸ್ಸಿ ಅವರು ಪ್ರಸ್ತುತ ವೆಲ್ಲಿಂಗ್ಟನ್ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಾಯುಪಡೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಜನರಲ್ ಬಿಪಿನ್ ರಾವತ್ ಅವರೊಂದಿಗೆ ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯ್ಕ್ ಗುರುಸೇವಕ್ ಸಿಂಗ್, ನಾಯ್ಕ್ ಜಿತೇಂದರ್ ಕುಮಾರ್, ನಾಯ್ಕ್ ವಿವೇಕ್ ಕುಮಾರ್, ನಾಯ್ಕ್ ಬಿ ಸಾಯಿ ತೇಜಾ, ಹವಾಲ್ದಾರ್ ಸತ್ಪಾಲ್ ಮತ್ತು ಪೈಲಟ್ಗಳು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು.
ಉತ್ತರಾಖಂಡದ ಪೌರಿ ಜಿಲ್ಲೆಯವರಾದ 63 ವರ್ಷದ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್ ಅವರು, 1958ರ ಮಾರ್ಚ್ 16ರಂದು ಜನಿಸಿದ್ದರು. ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಅವರೂ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದರು. 1978ರಲ್ಲಿ ಸೇನೆಗೆ ಸೇರಿದ ಬಿಪಿನ್ ರಾವತ್ ಸುಮಾರು 43 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.