ರವೇ ರಸ್ತಮ್ ಸಮಾರಭ್ಯ: ಯಾವತ್ ಸೂರ್ಯೋದಯೋ ಭವೇತ್! ಯಸ್ಯ ತಿಷ್ಟತಿ ಗೃಹೇ ದೀಪ: ತಸ್ಯ ನಾಸ್ತಿ ದರಿದ್ರತಾ !!
“ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಮನೆಯಲ್ಲಿ ದೀಪ ಬೆಳಗುತ್ತಿದ್ದರೆ ಅಲ್ಲಿ ದಾರಿದ್ರ್ಯ್ದ ದ ಸುಳಿವಿಲ್ಲ, ವಾಸುದೇವ ಬ್ರಹ್ಮ ಲಕ್ಷ್ಮಿ ರುದ್ರ ವಾಯು ಮೊದಲಾದ ಸಕಲ ದೇವತೆಗಳು ದೀಪದ ಒಂದೊಂದು ಭಾಗದಲ್ಲಿ ನೆಲೆಸಿದ್ದಾರೆ” ಅಂತಹ ದೀಪವನ್ನು ಬೆಳಗುವ ಬೆಳಕಿನ ಹಬ್ಬ ದೀಪಾವಳಿ ಮನೆ ಮನೆಗೂ ಮತ್ತೊಮ್ಮೆ ಬಂದಿದೆ . ಕತ್ತಲೆಯನ್ನು ಹೋಗಲಾಡಿಸುವ ಹಬ್ಬ , ಮನೆ ಮನೆಯ ಮನ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬ , ಕತ್ತಲು ಎಂದರೆ ತಮೋ ಗುಣ ,ಕತ್ತಲು ಎಂದರೆ ಅಜ್ಣಾನ : ಬೆಳಕು ಎಂದರೆ ಸತ್ವ ಗುಣ ,ಬೆಳಕು ಎಂದರೆ ಜ್ನಾನ ,ಕತ್ತಲು ಅಥವಾ ಅಂಧಕಾರವನ್ನುಮನೆಯಿಂದ ಓಡಿಸಬೇಕು , ಮನದಿಂದ ಓಡಿಸಬೇಕು . ಈ ಹಬ್ಬವೇ ದೀಪಾವಳಿ .
ಧನ ಧಾನ್ಯ ಪಶು ಸಂಪತ್ತು ಸಮೃದ್ಧಿಯಾಗಲಿ ಎಂಬ ಒಳ್ಳೆಯ ಉದ್ದೇಶದಿಂದ ಆಚರಿಸುವ ಹಬ್ಬವೆ ದೀಪಾವಳಿ . ಈ ವರ್ಷ ದೀಪಾವಳಿ ಹಬ್ಬ ನವೆಂಬರ್ 3 ರಂದು ಸಾಯಂಕಾಲ ಜಲ ಪೂರಣ ರಾತ್ರಿ ಚಂದ್ರೋದಯ ಕಾಲದಲ್ಲಿ ಬೆಳಗ್ಗಿನ ಜಾವದಲ್ಲಿ ಘಂಟೆ 5.38 ಕ್ಕೆ ಸರಿಯಾಗಿ ತೈಲಾಭ್ಯಂಗ ಸ್ನಾನ ನರಕ ಚತುರ್ದಶಿ ,ದಿನಾಂಕ 4 ರಂದು ಅಮಾವಾಸ್ಯೆ ಲಕ್ಷ್ಮಿ ಪೂಜೆ ದಿನಾಂಕ 5 ರಂದು ಶುಕ್ರವಾರ ಗೋ ಪೂಜೆ ಬಲೀಂದ್ರ ಪೂಜೆ ಅಂಗಡಿ ಪೂಜೆ ತುಳಸಿ ಪೂಜೆ ಆರಂಭ ಈ ದಿನ ಆರಂಭವಾಗಿ ದಿನಾಂಕ 16.11.2021 ರಂದು ಮಂಗಳವಾರ ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ ಅಂತ್ಯಗೊಂಡು ದೀಪಾವಳಿ ಕಾರ್ಯ ಕ್ರಮ ಮುಗಿಯಲಿದೆ .
ನರಕ ಚತುರ್ದಶಿ : ಈ ದಿನದ ಕಾರ್ಯಕ್ರಮದ ಆಚರಣೆಯ ಹಿಂದೆ ಇರುವ ಮಹತ್ವ ವೆಂದರೆ ನರಕಾಸುರನು ಹಿಂದೆ ದ್ವಾಪರಯುಗದಲ್ಲಿ ಬ್ರಹ್ಮನ ವಾರ ಪಡೆದು ಪ್ರಜಾ ಪೀಡಕನಾಗಿದ್ದನು . ಆಗ್ನೀ ದೇವರ ಮಕ್ಕಳಾದ 16,000 ಹೆಣ್ಣು ಮಕ್ಕಳನ್ನು ಅಪಹರಿಸಿ ಬಂಧನದಲ್ಲಿ ಇಟ್ಟಿದ್ದನು . ತನ್ನನ್ನು ಮದುವೆ ಯಾಗ ಬೇಕೆಂದು ಪೀಡಿಸುತ್ತಿದ್ದನು . ಆ ಹೆಣ್ಣು ಮಕ್ಕಳು ಶ್ರೀ ಕೃಷ್ಣನಲ್ಲಿ ತಮ್ಮನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದಾಗ ಶ್ರೀಕೃಷ್ಣನು ನರಕಾಸುರನನ್ನು ಕೊಂಡು ಅವರನ್ನು ರಕ್ಷಿಸಿದನು . ಶ್ರೀ ಕೃಷ್ಣ ತನ್ನ ಪತ್ನಿ ಸತ್ಯಭಾಮೆಯೊಂದಿಗೆ ಸೇರಿಕೊಂಡು ನರಕಾಸುರನನ್ನು ವಧೆ ಮಾಡಿ ಆಯಾಸಗೊಂಡು ತನ್ನ ಮನೆಗೆ ಹಿಂತಿರುಗಿದಾಗ ಸ್ವತ: ದೇವಕಿ ಮತ್ತು ಇತರರು ಎಳ್ಳೆಣ್ಣೆ ಹಚ್ಚಿ ಬಿಸಿನೀರು ಸ್ನಾನ ಮಾಡಿಸಿ ಆಯಾಸ ಪರಿಹಾರ ಮಾಡಿಸಿದರು , ದ್ವಾಪರ ಯುಗದಲ್ಲಿ ನಡೆದ ಘಟನೆ ಇದು .
ಅಂದಿನಿಂದ ಇಂದಿನ ವರೆಗೆ ಈ ಕಲಿಯುಗದಲ್ಲಿಯೂ ವರ್ಷದಲ್ಲಿ ಒಂದು ದಿನ ವರ್ಷದಲ್ಲಿ ಒಂದು ದಿನ ನರಕ ಚತುರ್ದಶಿಯಾಂಡು ಶ್ರೀ ಭಗವಂತನಿಗೆ ಮತ್ತು ಭೂ ತಾಯಿಗೆ ಗರಿಕೆಯ ಮೂಲಕ ಎಣ್ಣೆಯನ್ನು ತಾಗಿಸಿ ನಮ್ಮ ಅಮ್ಮ ನಮಗೆ ಎಣ್ಣೆಯನ್ನು ತಲೆಗೆ ಮೈಯಿಗೆ ಹಚ್ಚಿ ಬಿಸಿನೀರಿನ ಸ್ನಾನ ಮಾಡಿಸುತ್ತಾರೆ ,ಶ್ರೀ ಕೃಷ್ಣನಿಗೆ ಅರ್ಚನೆಯನ್ನು ಮಾಡುತ್ತೇವೆ ,ಹೊಸತಾಗಿ ಮದುವೆಯಾದ ಗಂಡಿಗೆ ಹೆಣ್ಣಿನ ಮನೆಯಲ್ಲಿ ಹೊಸ ಹಬ್ಬವಾಗಿರುತ್ತದೆ
ಅಮಾವಾಸ್ಯೆ: ಅಮಾವಾಸ್ಯೆಯಂದು ವ್ಯಾಪಾರಿಗಳು ತಮ್ಮ ಹಣದ ಪೆಟ್ಟಿಗೆಗೆ ಅರ್ಥಾತ್ ಲಕ್ಷ್ಮಿಗೆ ಪೂಜೆ ಮಾಡುವ ಮೂಲಕ ಸಾಲ ಮಾಡಿ ವಸ್ತುಗಳನ್ನು ತೆಗೆದು ಕೊಂಡು ಹೋಗುವವರು ಒಮ್ಮೆ ತಮ್ಮ ಸಾಲವನ್ನು ಚುಕ್ತಾ ಗೊಳಿಸಿ ಹೊಸ ಲೆಕ್ಖವನ್ನು ಆರಂಭಿಸುವ ದಿನವಾಗಿದೆ,ಕ್ಷೀರ ಸಮುದ್ರ ಮಂಥನ ಮಾಡುವ ವೇಳೆಯಲ್ಲಿ ಮೊದಲು ಲಕ್ಷ್ಮಿಯ ಉದ್ಭವ ವಾಗುತ್ತದೆ . ಅವಳಿಗೆ ಪೂಜೆಯನ್ನು ಮಾಡುವ ಮೂಲಕ ಹೊಸ ವರ್ಷ ಶುಭವಾಗಲಿ ಎಂದು ಅವಳಲ್ಲಿ ಪ್ರಾರ್ಥಿಸುತ್ತೇವೆ .
ಬಲೀಂದ್ರ ಪೂಜೆ : ಪ್ರಹ್ಲಾದನ ಮೊಮ್ಮಗ ಬಲಿ ಚಕ್ರವರ್ತಿ . ಬಲಿ ಯ ಉದ್ಧಾರಕ್ಕಾಗಿ ಭಗವಂತ ವಾಮನ ಅವತಾರವನ್ನು ಪಡೆದು ತ್ರಿವಿಕ್ರಮನಾದ . ಪುರಾಣದ ಬಲಿ ಚಕ್ರವರ್ತಿಗೊಂದು ಹುತಾತ್ಮನ ಪಟ್ಟವಿದೆ . ನಾಡನ್ನು ಚೆನ್ನಾಗಿ ಆಳಿದವನು ಹಾಗೆಯೇ ಪ್ರಜೆಗಳನ್ನು ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನೋಡಿಕೊಂಡವನು .
ಇಂದ್ರ ಪದವಿಯ ಆಸೆಯಿಂದ 99 ಯಾಗಗಳನ್ನು ಮುಗಿಸಿದನು. ಆತನು ಇನ್ನೊಂದು ಯಾಗ ಪೂರೈಸಿದ ಎಂದರೆ ಇಂದ್ರ ತನ್ನ ಪದವಿಯನ್ನು ಬಲಿ ಚಕ್ರವರ್ತಿಗೆ ಬಿಟ್ಟು ಕೊಡ ಬೇಕಾದಿತ್ತು .ದೇವತೆಗಳೆಲ್ಲ ಇದರಿಂದ ಚಿಂತಿತರಾಗಿ ವಿಷ್ಣುವಿನ ಮೊರೆ ಹೋದರು .ಅದಕ್ಕಾಗಿಯೇ ವಿಷ್ಣು ವಾಮನ ರೂಪವನ್ನು ಧರಿಸಿ ಯಜ್ನ ಸ್ಥಳಕ್ಕೆ ಬಂದನು .ಯಜ್ನದ ನಿಯಮದಂತೆ ಯಾರೆ ಯಜ್ನ ನಡೆಯುವ ಸ್ಥಳಕ್ಕೆ ಬಂದರೂ ಅವರು ಕೇಳುವ ವಸ್ತುಗಳನ್ನು ದಾನ ರೂಪವಾಗಿ ಕೊಡಬೇಕಾಗಿತ್ತು . ವಾಮನ ರೂಪಿ ವಿಷ್ಣು ಮೂರು ಹೆಜ್ಜೆ ಸ್ತಳವನ್ನು ದಾನ ರೂಪವಾಗಿ ಕೇಳಿದನು. ಗುರುಗಳಾದ ಶುಕ್ರಾಚಾರ್ಯರು ಬಲಿ ಚಕ್ರವರ್ತಿಗೆ ಸೂಚನೆಯನ್ನು ಕೊಟ್ಟರು “ಬಂದಿರುವ ವ್ಯಕ್ತಿ ಸಾಮಾನ್ಯನಲ್ಲ ಸಾಕ್ಷಾತ್ ವಿಷ್ಣು ದೇವರು ,ನೀನು ತೊಂದರೆಗೆ ಒಳಗಾಗುತ್ತೀಯ “ ಎಂದಾಗ ಸಾಕ್ಷಾತ್ ವಿಷ್ಣು ದೇವರಿಗೆ ದಾನ ಕೊಡುವ ಯೋಗ ನನಗೆ ಬಂದರೆ ಅದಕ್ಕಿಂತ ಪುಣ್ಯ ಬೇರೇನಿದೆ ಎನ್ನುತ್ತಾನೆ ,ಬಲಿ ಚಕ್ರವರ್ತಿ ದಾನ ಕೊಡಲು ಒಪ್ಪಿದಾಗ ವಾಮಾನನು ಒಂದನೇ ಹೆಜ್ಜೆಯನ್ನು ಭೂಮಿಯಲ್ಲಿಟ್ಟು ಎರಡನೇ ಹೆಜ್ಜೆಯನ್ನು ಆಕಾಶಕ್ಕೆ ಇಟ್ಟನು . ಮೂರನೆಯ ಹೆಜ್ಜೆಯನ್ನು ಎಲ್ಲಿ ಇಡಬೇಕು ಎಂದು ಬಲಿಯಲ್ಲಿ ಕೇಳಿದಾಗ ಬಲಿ ಚಕ್ರವರ್ತಿ ವಿನಮ್ರವಾಗಿ ಎರಡೂ ಕೈಗಳನ್ನು ಮುಗಿಯುತ್ತಾ ಅವನೆದುರು ಕುಳಿತುಕೊಳ್ಳುತ್ತಾನೆ ತನ್ನ ತಲೆಯ ಮೇಲೆ ಇಡುವಂತೆ ಹೇಳುತ್ತಾನೆ ,ಹಾಗೆಯೇ ವರ್ಷಕ್ಕೊಮ್ಮೆ ತನ್ನ ಪ್ರೀತಿಯ ಪ್ರಜೆಗಳನ್ನು ನೋಡಿಕೊಂಡು ಹೋಗಲು ಬರುವ ಅವಕಾಶವನ್ನು ಮಾಡಿಕೊಡುವಂತೆ ವಿಷ್ಣು ದೇವರಲ್ಲಿ ಪ್ರಾರ್ಥಿಸುತ್ತಾನೆ , ಅವನು ಭೂ ಲೋಕಕ್ಕೆ ಬರುವ ದಿನವೇ ಬಲಿ ಪಾಡ್ಯ . ಅದೇ ದಿನ ಗೋ ಪೂಜೆಯನ್ನು ಮಾಡುತ್ತೇವೆ .
ಇದರ ಮಹತ್ವ ವೆಂದರೆ ಹಿಂದೂಗಳು ಅನಾದಿ ಕಾಲದಿಂದಲೂ ಹಸುವನ್ನು ದೇವತಾ ಸ್ವರೂಪದಿಂದ ಕಾಣುತಿದ್ದಾರೆ. ನಮ್ಮೆಲ್ಲರ ಶಕ್ತಿ ,ನಮ್ಮೆಲ್ಲರ ಸಂಪತ್ತು , ನಮ್ಮ ಸರ್ವಸ್ವವೂ ಗೋ ಮಾತೆಯೇ ಆಗಿದೆ ಅಂದ್ತಹ ಗೋಮಾತೆಯನ್ನು ರಕ್ಷಿಸುವ ಕೆಲಸವನ್ನು ನಮ್ಮ ಸರಕಾರ ಕೂಡ ಕಾನೂನಾತ್ಮಕವಾಗಿ ಮಾದ ಹೊರಟಿರುವುದು ಸಂತೋಷದ ವಿಷಯವಾಗಿದೆ .
” ವರುಣಶ್ಚೈವ ಗೋ ಮೂತ್ರೆ ಗೋಮಯೆ ಹವ್ಯ ವಾಹನ: ದಧೆ ವಾಯು: ಸಮುದ್ಧಿಷ್ಟ: ಸೋಮ: ಕ್ಷೀರೆ ಘೃತೆ ರವಿ:”!! ಗೋಮೂತ್ರದಲ್ಲಿ ವರುಣ ದೇವರು ;ಗೋಮಯದಲ್ಲಿ ಅಗ್ನಿ ದೇವರು ;ಮೊಸರಿನಲ್ಲಿ ವಾಯು ದೇವರು ;ಗೋವಿನ ಹಾಲಿನಲ್ಲಿ ಚಂದ್ರನು ತುಪ್ಪದಲ್ಲಿ ಸೂರ್ಯ ದೇವರು ಇದ್ದಾರೆ . ದಾನಗಳಲ್ಲಿ ಶ್ರೇಷ್ಟವಾದ ದಾನ ಗೋದಾನ ನೂತನ ಗೃಹ ಪ್ರವೇಶದ ಸಂದರ್ಬದಲ್ಲಿ ನಾವು ಮೊದಲು ದಾನ ಮತ್ತು ಕರುವನ್ನು ಮನೆಗೆ ಪ್ರವೇಶ ಮಾಡಿಸುತ್ತೇವೆ ,ಒಂದು ಬಾರಿ ಗೋಮಾತೆಗೆ ಪ್ರದಕ್ಷಿಣೆ ಬಂದರೆ ತ್ರಿಲೋಕ ಪ್ರದಕ್ಷಿಣೆ ಮಾಡಿದ ಪುಣ್ಯ ಬರುತ್ತದೆ ,ಕರ್ನಾಟಕದ ಸಮಸ್ತರಿಗೂ ದೀಪಾವಳಿಯ ಶುಭಾಷಯಗಳು .
ಕೆ.ಸುಬ್ರಹ್ಮಣ್ಯ ಆಚಾರ್ಯ ಕಾರಿಂಜೇಶ್ವರ ಜ್ಯೋತಿಶ್ಯಾಲಯ ಹಿರಿಯಂಗಡಿ ಕಾರ್ಕಳ 574104 9741489529