ಕಾರ್ಕಳ : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು ರಾಜ್ಯದಲ್ಲೂ ಅದನ್ನು ಜಾರಿಗೊಳಿಸಲಾಗುತ್ತಿದೆ. ಹೊಸಶಿಕ್ಷಣ ನೀತಿಯಲ್ಲಿ ನೂರಾರು ಹೊಸ ಅಂಶಗಳನ್ನು ಸೇರಿಸಗಿದೆ. ಶಿಕ್ಷಕರು ಹೊಸತನಕ್ಕೆ ತಮ್ಮನ್ನು ಅಳವಡಿಸಿಕೊಳ್ಳಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು ಹೇಳಿದರು.
ಅವರು ಸೆ. 5ರಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವುಗಳ ವತಿಯಿಂದ ಅಂಡಾರು ವಿಠಲ ಕಿಣಿ ರುಕ್ಮಿಣಿ ಸಾಂಸ್ಕೃತಿಕ ಸಭಾಭವನದಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
ಕೊರೋನಾ ವೈರಸ್ ಸೋಂಕು ಹತ್ತಾರು ಹೊಸತನಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಕಪ್ಪು ಗೋಡೆಯ ಮೇಲಿನ ಪಾಠದ ಬದಲು ಆನ್ಲೈನ್ ಪಾಠಕ್ಕೆ ಒಗ್ಗಬೇಕಾದ ಅನಿವಾರ್ಯತೆ ಬಂದಿದೆ. ಅದನ್ನು ಶಿಕ್ಷಕರು ಸವಾಲನ್ನಾಗಿ ಸ್ವೀಕರಿಸಬೇಕು. ಕಳೆದ ಎರಡು ವರ್ಷಗಳಲ್ಲಿ ಶಾಲೆಯನ್ನೂ ನೋಡದ ಮಕ್ಕಳಿದ್ದಾರೆ. ಆದರೆ, ಇದೀಗ ಶಾಲಾರಂಭವಾಗುತ್ತಿದ್ದು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಶಿಕ್ಷಕರಿಂದಾಗಬೇಕು. ಈ ತನಕ ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಕ್ರೀಡೆ, ಸಾಹಿತ್ಯ, ಸಂಗೀತ ಮೊದಲಾದ ಪ್ರತಿಭಾವಂತ ಮಕ್ಕಳನ್ನು ಗುರುತಿಸುವಂತಾಗಬೇಕು. ಶಿಕ್ಷಕರು ಹೊಸತನಕ್ಕೆ ತಮ್ಮನ್ನು ತೆರೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳು ತುಂಬಾ ಕಠಿಣವಾಗಲಿವೆ. ತಾಲೂಕಿನ ಶಿಕ್ಷಕರು ಕೊರೋನಾ ವೈರಸ್ ಸೋಂಕಿನ ಜಾಗೃತಿ ಕಾರ್ಯದಲ್ಲಿ ಹಗಲಿರುಳು ಎನ್ನದೇ ದುಡಿದಿದ್ದಾರೆ. ಅವರೆಲ್ಲರನ್ನು ತಾನು ಅಭಿನಂದಿಸಲೇ ಬೇಕು. ಅವರ ದುಡಿಮೆಯ ಪರಿಣಾಮ ತಾಲ್ಲೂಕಿನಲ್ಲಿ ಕೊರೋನಾ ವೈರಸ್ ಸೋಂಕಿನ ತೀವ್ರತೆ ತಪ್ಪಿದೆ ಎಂದರು.
ಅಭಿನಂದನೆ
ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ ನಿವೃತ್ತ ಶಿಕ್ಷಕ ಅಂಜಲಿನ್ ಡಿ ಸೋಜಾ, ಅನುಸೂಯ ಎನ್., ಆಶಾಲತಾ ಶಂಕರ್, ಭಾಗೀರಥಿ, ಬ್ಲೋಸಂ ರಾಜಮಣಿ ಸೋನ್ಸ್, ದಿನೇಶ್ ಯು. ಎಸ್., ಎಮಿಲ್ದಾ ಪಿಂಟೋ, ಎಚ್. ಕೆ. ಗಣಪಯ್ಯ, ಗಾಯತ್ರಿದೇವಿ, ಹರ್ಷವರ್ಧನ್ ಪಿ. ಕುಮಾರ್, ಹೇಮಾವತಿ, ಹಿಲ್ದಾ ಮೆಂಡೋನ್ಸಾ, ಜಯಲಕ್ಷ್ಮೀ, ಜೆಸಿಂತ ಡಿ ಮೆಲ್ಲೊ, ಕೆ. ದೇವದಾಸ ಹೆಗ್ಡೆ, ಶಾಂತಿರಾಜ ಹೆಗ್ಡೆ, ಕಮಲಾಕರ ಎಂ.ವಿ., ಕುರ್ಷಿದಾ, ಕುಸುಮಾ ಎಸ್., ಮಹಾದೇವ ಎಸ್. , ಲೀಲಾವತಿ, ಮೀನಾಕ್ಷಿ ಮಕ್ತಾಬಾಯಿ, ಪರಮೇಶ್ವರ ಹೆಬ್ಬಾರ, ಸದಾನಂದ ನಾಯಕ್, ಸತೀಶ್ ಶೆಟ್ಟಿ, ಶಾರದಾ ಬಿ. ಶೆಟ್ಟಿ, ಶ್ಯಾಮಲಾ, ಸುಧಾಕರ ಪೈ, ಸುಲೋಚನಾ, ಸುಲೋಚನಾ ನಿಟ್ಟೆ, ಸುಲೋಚನಾ ಸಾಣೂರು, ಸುಮತಿ, ತಿಲೋತ್ತಮೆ, ಉಷಾ ರಾಯ್ಕರ್, ವಾಣಿ ಪಿ., ವನಜಾ ಕೆ., ವಾರಿಜಾ, ವಸಂತಿಬಾಯಿ, ವಿಷ್ಣುಮೂರ್ತಿ ಬಲ್ಲಾಳ್ ಅವರನ್ನು ಅಭಿನಂದಿಸಲಾಯಿತು. ಕಳೆದ ಬಾರಿ ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರನ್ನು,ವಿವಿಧ ಪ್ರಶಸ್ತಿ ಪುರಸ್ಕೃತರನ್ನು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕಿನ ನಿವೃತ್ತ ಶಿಕ್ಷಕರನ್ನು, ಪ್ರಶಸ್ತಿ ವಿಜೇತ ಶಿಕ್ಷಕರನ್ನು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಕಾರ್ಕಳ ತಹಶೀಲ್ದಾರ್ ಪ್ರಕಾಶ ಎಸ್. ಮರಬಳ್ಳಿ, ಹೆಬ್ರಿ ತಹಶಿಲ್ದಾರ್ ಪುರಂದರ, ಪುರಸಭಾಧ್ಯಕ್ಷೆ ಸುಮಾಕೇಶವ್, ಕಾರ್ಕಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗುರುದತ್ ಎಂ.ಎನ್., ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್, ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಎಸ್.ವಿ.ಟಿ ಶಿಕ್ಷಣ ಸಂಸ್ಥೆ ಸಂಚಾಲಕ ಕೆ.ಪಿ. ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಣ ಸಮನ್ವಯಾಧಿಕಾರಿ ಪ್ರವೀಣ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಪ್ರಕಾಶ್, ಶಿಕ್ಷಕರಾದ ರಕ್ಷಿತ್, ಜ್ಯೋತಿ, ಸಂತೋಷ ಕುಮಾರ್, ಪ್ರೇಮಾ ಸನ್ಮಾನಿತರನ್ನು ಪರಿಚಯಿಸಿದರು. ಬಾಲಕೃಷ್ಣ ನಾಯಕ್ ಸಹಕರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್ ಜಿ.ಎಸ್. ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ನಿರೂಪಿಸಿದರು. ಭಾಸ್ಕರ ಟಿ. ವಂದಿಸಿದರು.