ಕಾರ್ಕಳ : ಕೇರಳದಿಂದ ಕಾರ್ಕಳಕ್ಕೆ ಬಂದು ನೆಲೆಸಿರುವ ಮಲೆಯಾಳಿಗಳು ಬಿಜೆಪಿ ಬೆಂಬಲಿಸುವ ಮೂಲಕ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೇರುವಂತೆ ಮಾಡಬೇಕು. ಉತ್ತಮ ಆಡಳಿತಕ್ಕಾಗಿ ತಮ್ಮೂರುನಲ್ಲಿರುವ ಸಂಬಂಧಿಕರನ್ನು ಬಿಜೆಪಿಗೆ ಮತ ನೀಡುವಂತೆ ಪ್ರೇರೆಪಿಸಬೇಕೆಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದರು.
ಅವರು ಶುಕ್ರವಾರ ಶಾಸಕ ವಿ. ಸುನಿಲ್ ಕುಮಾರ್ ಅವರ ಕಚೇರಿ ವಿಕಾಸದಲ್ಲಿ ಕಾರ್ಕಳದಲ್ಲಿನ ಮಲೆಯಾಳಿ ಭಾಷಿಗರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು.
ಸುನಿಲ್ ಯೋಗ್ಯ ವ್ಯಕ್ತಿ
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಕೇರಳ ರಾಜ್ಯ ಸಹ ಉಸ್ತುವಾರಿಯಾದ ಬಳಿಕ ಪಕ್ಷ ಸಂಘಟನೆ ಸುಸೂತ್ರವಾಗಿ ನಡೆಯುತ್ತಿದೆ. ಪಕ್ಷ ಬಲಪಡಿಸುವಲ್ಲಿ ಸುನಿಲ್ ಕಾರ್ಯವೈಖರಿ ಮಾದರಿಯಾಗಿದ್ದು, ಆ ಹುದ್ದೆಗೆ ಯೋಗ್ಯ ವ್ಯಕ್ತಿಯಾಗಿದ್ದಾರೆ. ಮೆಟ್ರೋ ಮ್ಯಾನ್ ಖ್ಯಾತಿಯ ಇ. ಶ್ರೀಧರನ್ ಸೇರಿದಂತೆ ಹಲವಾರು ಪ್ರಮುಖರು ಬಿಜೆಪಿಯತ್ತ ಒಲವು ಹೊಂದಿದ್ದಾರೆ. ಎಲ್ಲರೂ ಸೇರಿ ಪಕ್ಷವನ್ನು ಕಟ್ಟುವ ಕಾರ್ಯವಾಗಬೇಕಿದೆ ಎಂದರು.
ಜನಜೀವನ ಬದಲಾಗಿಲ್ಲ-ಸುನಿಲ್ ಕುಮಾರ್
ಕೇರಳದಲ್ಲಿ 5 ವರ್ಷಕ್ಕೊಮ್ಮೆ ಯುಡಿಎಫ್, ಎಲ್ಡಿಎಫ್ ಮಧ್ಯೆ ಅಧಿಕಾರ ಬದಲಾಗಿದ್ದರೂ ಜನಜೀವನ ಮಾತ್ರ ಬದಲಾಗಿಲ್ಲ. ಶೈಕ್ಷಣಿಕ ಕೇಂದ್ರಗಳ ಸ್ಥಾಪನೆ, ಆರೋಗ್ಯ, ತಂತ್ರಜ್ಞಾನ ಕ್ಷೇತ್ರದಲ್ಲಿ ಕೇರಳ ಅಭಿವೃದ್ಧಿ ಕಂಡಿಲ್ಲ. ಕೇರಳ ಮತದಾರರು ಬಿಜೆಪಿ ಬೆಂಬಲಿಸುವ ಮೂಲಕ ನವಕೇರಳ ನಿರ್ಮಾಣದ ಪಣತೊಡಬೇಕಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ವೇದಿಕೆಯಲ್ಲಿ ದ.ಕ. ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಸೋಜನ್ ಪಿ.ಜೇಮ್ಸ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ತಾಲೂಕು ಅಧ್ಯಕ್ಷ ಜೆರಾಲ್ಡ್ ಡಿʼಸಿಲ್ವಾ, ಉಪಾಧ್ಯಕ್ಷ ಫಿಲಿಫ್ ಅಗಸ್ಟೀಯನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಡಿʼಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಅಲ್ಫೋನ್ಸಾ ಅಂಡಾರು ಸ್ವಾಗತಿಸಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರವೀಂದ್ರ ಮಡಿವಾಳ್ ನಿರೂಪಿಸಿದರು. ಜೆರಾಲ್ಡ್ ಡಿಸೋಜಾ ವಂದಿಸಿದರು.