ಮುಂಬಯಿ, ನ.5 : ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ನಿನ್ನೆ ಬೆಳಗ್ಗೆ ಸೆರೆಯಾಗಿರುವ ಖ್ಯಾತ ಪತ್ರಕರ್ತ ರಿಪಬ್ಲಿಕ್ ಟಿವಿ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರನ್ನು ಅಲಿಬಾಗ್ ನ ನ್ಯಾಯಾಲಯ 14 ದಿನಗಳ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.
ಅರ್ನಬ್ ಗೋಸ್ವಾಮಿಯನ್ನು ಅಲಿಬಾಗ್ ಪೊಲೀಸರು ನಿನ್ನೆ ನಸುಕಿನ ಹೊತ್ತು ಮುಂಬಯಿಯಲ್ಲಿರುವ ಅವರ ಮನೆಯಿಂದ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.
ಅರ್ನಬ್ ಹಾಗೂ ಅವರ ಜೊತೆ ಸೆರೆಯಾಗಿರುವ ಇಬ್ಬರನ್ನು ಇಂದು ಬೆಳಗ್ಗೆ ಪೊಲೀಸರು ಜಿಲ್ಲಾ ದಂಡಾಧಿಕಾರಿ ನ್ಯಾಯಾಯದಲ್ಲಿ ಹಾಜರುಪಡಿಸಿದರು.
ಈ ನಡುವೆ ಅರ್ನಬ್ ಗೋಸ್ವಾಮಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಇದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿದೆ.
ಅರ್ನಬ್ ಬಂಧಿಸುವಾಗ ಹಲ್ಲೆ ಮಾಡಿದ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದಾರೆ.