ಕಾರ್ಕಳ : 5 ವರ್ಷಗಳ ಹಿಂದೆ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ವಾಗತ ಗೋಪುರವೊಂದು ಜೋಡುರಸ್ತೆಯ ಮೂಲೆಯಲ್ಲಿ ಪಾಳುಬಿದ್ದಿದೆ. 2015ರ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭ ಕಾರ್ಕಳ ಪೇಟೆಯಿಂದ ಇತರ ಪಟ್ಟಣಗಳಿಗೆ ಇರುವ ದೂರವನ್ನು ಸೂಚಿಸುವ ಸಲುವಾಗಿ ಸರಕಾರದಿಂದ ದೊರೆತ ವಿಶೇಷ ಅನುದಾನದಲ್ಲಿ ಪುರಸಭೆಯು 3 ಗೋಪುರಗಳನ್ನು ನಿರ್ಮಿಸಿತ್ತು.
ಗೋಮಟೇಶ್ವರ ಬಳಿಯಲ್ಲೊಂದು ಹಾಗೂ ಬೈಪಾಸ್ ರಸ್ತೆಯಲ್ಲೊಂದು ಹೀಗೆ ಎರಡು ಸ್ವಾಗತಗೋಪುರ ಸುಸ್ಥಿತಿಯಲ್ಲಿದ್ದರೂ ಜೋಡುರಸ್ತೆ ಗೋಪುರ ಮಾತ್ರ ಉಪಯೋಗವಿಲ್ಲದೇ ಮೂಲೆಯಲ್ಲಿ ಬಿದ್ದಿದೆ.
ಮರುಸ್ಥಾಪನೆಗೆ ಮರೆತು ಹೋಯಿತು
ಕಾರ್ಕಳ-ಉಡುಪಿ ರಾಷ್ಟ್ರೀಯ ಹೆದ್ದಾರಿಯಾಗುವ ಸಂದರ್ಭ ಎರಡೂವರೆ ವರ್ಷಗಳ ಹಿಂದೆ ತೆಗೆದಿರಿಸಲಾದ ಜೋಡುರಸ್ತೆ ಗೋಪುರವನ್ನು ರಸ್ತೆ ಕಾಮಗಾರಿ ಪೂರ್ಣವಾದ ಬಳಿಕ ಮರುಸ್ಥಾಪಿಸುವಲ್ಲಿ ಪುರಸಭೆಗೆ
ಮರೆತು ಹೋಯಿತು.
ತುಕ್ಕು ಹಿಡಿಯುತ್ತಿದೆ
ನಾಮ ಫಲಕದ ಬಣ್ಣ ಕಳೆಗುಂದಿ ಕಬ್ಬಣದ ರಾಡ್ ತುಕ್ಕು ಹಿಡಿಯುತ್ತಿದೆ ಎಂದು ಅಭಿಪ್ರಾಯಪಟ್ಟ ಸ್ಥಳೀಯರೋರ್ವರು ಇನ್ನು ಕೆಲ ಸಮಯದ ಬಳಿಕ ಇದನ್ನು ಗುಜರಿಗೆ ರವಾನಿಸುವಂತಾಗಲಿದೆ. ಈ ಮೂಲಕ ಸಾರ್ವಜನಿಕ ಹಣ ವೃಥಾ ಪೋಲು ಮಾಡಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.