ಹೈದರಾಬಾದ್, ಜು. 31 : ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಮದ್ಯದ ಅಮಲಿಗಾಗಿ ಸ್ಯಾನಿಟೈಸರ್ ಕುಡಿದು 9 ಮಂದಿ ಸಾವನ್ನಪ್ಪಿದ್ದಾರೆ.
ಪ್ರಕಾಶಂ ಜಿಲ್ಲೆಯ ಕುರಿಚೇಡು ಪಟ್ಟಣದಲ್ಲಿ ಕಳೆದ ಎರಡು ದಿನಗಳಲ್ಲಿ ಈ 9 ಸಾವುಗಳು ಸಂಭವಿಸಿವೆ. ಓರ್ವ ಬುಧವಾರ ತಡರಾತ್ರಿ, ಇಬ್ಬರು ಗುರುವಾರ ರಾತ್ರಿ ಮತ್ತು 6 ಮಂದಿ ಶುಕ್ರವಾರ ಬೆಳಗ್ಗೆ ಸಾವಿಗೀಡಾಗಿದ್ದಾರೆ.
ಸತ್ತವರಲ್ಲಿ ಮೂವರು ಭಿಕ್ಷುಕರು ಮತ್ತು ಉಳಿದವರು ಸ್ಲಂ ನಿವಾಸಿಗಳು. 20 ಮಂದಿ ಸ್ಯಾನಿಟೈಸರ್ ಸೇವಿಸಿ ಅಸ್ವಸ್ಥರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ದುರ್ಗಾ ದೇವಿ ದೇವಸ್ಥಾನದ ಎದುರು ಭಿಕ್ಷೆ ಬೇಡುತ್ತಿದ್ದ ಓರ್ವ ಭಿಕ್ಷುಕ ಸ್ಯಾನಿಟೈಸರ್ ಕುಡಿದು ಹೊಟ್ಟೆಯುರಿ ತಾಳದೆ ನರಳುತ್ತಿದ್ದಾಗ ಇಲ್ಲಿನ ಜನರು ಅಮಲಿಗಾಗಿ ಸ್ಯಾನಿಟೈಸರ್ ಕುಡಿಯುತ್ತಿರುವ ವಿಷಯ ಬೆಳಕಿಗೆ ಬಂತು.
ಕುರಿಚೇಡುವಿನಲ್ಲಿ ಕೊರೊನಾ ತೀವ್ರಗೊಂಡ ಕಾರಣ ಲಾಕ್ ಡೌನ್ ಮಾಡಲಾಗಿದ್ದು, ಹೀಗಾಗಿ ಎಲ್ಲ ಮದ್ದಂಗಡಿಗಳು ಬಂದ್ ಆಗಿವೆ.