ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಜಾರಿ ಮಾಡಲಾಗಿರುವ ಲಾಕ್ ಡೌನ್ ಕುರಿತಂತೆ ಗೃಹ ಸಚಿವ ಎಸ್. ಆರ್. ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಒಂದು ವಾರದ ಲಾಕ್ಡೌನ್ ಮಂಗಳವಾರ ಅಂತ್ಯವಾಗಲಿದ್ದು, ನಂತರ ಯಾವುದೇ ಕಾರಣಕ್ಕೂ ಲಾಕ್ಡೌನ್ ಅನ್ನು ಮುಂದುವರೆಸುವುದಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.
ಈ ಒಂದು ವಾರಗಳ ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಬೆಳಗ್ಗೆ 12 ಗಂಟೆವರೆಗೆ ತರಕಾರಿ ಹಾಲು ಸೇರಿದಂತೆ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಿದ್ದೇವೆ.
ಲಾಕ್ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡಿದ ಹಲವಾರು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಾಧ್ಯವಾದ ಎಲ್ಲಾ ಮಾರ್ಗದಲ್ಲೂ ಪ್ರಯತ್ನ ನಡೆಸುತ್ತಿದೆ. ಆದರೆ, ಯಾವುದೇ ಕಾರಣಕ್ಕೆ ಮಂಗಳವಾರದ ನಂತರ ಬೆಂಗಳೂರಿನಲ್ಲಿ ಲಾಕ್ಡೌನ್ ಮುಂದುವರೆಯುವುದಿಲ್ಲ. ಅಲ್ಲದೆ, ಈ ಕುರಿತು ಸಿಎಂ ಯಡಿಯೂರಪ್ಪ ಸಹ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೊರೋನಾ ನಿಯಂತ್ರಣದ ಬಗ್ಗೆಯೂ ಮಾತನಾಡಿರುವ ಅವರು, “ಕೋವಿಡ್ ಪ್ರಾರಂಭವಾದ ನಂತರ ನಗರ ಪ್ರದೇಶಗಳಲ್ಲಿ ಸ್ಯಾನಿಟೈಜ್ ಮಾಡುತ್ತಿದ್ದೇವೆ. ಈಗಾಗಲೇ ಐವತ್ತು ವಾಹನಗಳನ್ನ ನಗರದಲ್ಲಿ ಆಯೋಜಿಸಿದ್ದು, ಪ್ರತಿ ದಿನ 40 ಜಾಗದಲ್ಲಿ ಸ್ಯಾನಿಟೈಜ್ ಮಾಡಲಾಗುತ್ತಿದೆ. ಆಸ್ಪತ್ರೆ ,ರೈಲ್ವೆ ಸ್ಟೇಷನ್ ಸೇರಿ ಹಲವೆಡೆ ಕಾರ್ಯಾಚರಣೆ ನಡೆಸುವುದು ನಮ್ಮ ಗುರಿ .
ಈ ಕೆಲಸಕ್ಕಾಗಿ ಈಗಾಗಲೇ ಸಿವಿಲ್ ಡಿಫೆನ್ಸ್, ಎಸ್ಡಿಆರ್ಎಫ್ ,ಅಗ್ನಿ ಶಾಮಕ ಇಲಾಖೆಯಿಂದ ಸಹಾಯ ಪಡೆಯಲಾಗುತ್ತಿದೆ. ತರಬೇತಿ ಹೊಂದಿದ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.