ತೊಟ್ಟಿಕ್ಕುವ ಹನಿ ಮಳೆಯೂ ಪಡೆದಿದೆ ರಭಸ
ನೋಡುತ್ತಿದ್ದ ಮನಸ್ಸಿಗೆ ಅದೇನೋ ಆಭಾಸ..
ಬಾನು ಕಣ್ಣೀರಿಡುತ್ತಿದೆಯೋ
ಅಥವಾ
ಇಳೆಯ ಮನದೊಳಗಿನ ಬೇಗೆ ತಣಿಸುವ ತವಕವೋ ಎಂದು
ಹುಚ್ಚೆದ್ದು ಹಚ್ಚ ಹಸಿರ ನಾಶ ಮಾಡುವ ಮನುಜರ ಮಣಿಸಲೆಂದೋ
ಅಥವಾ
ನಾಶಗೊಂಡ ಮರಗಿಡಗಳಿಗೆ ಮತ್ತೆ ಹುಟ್ಟು ನೀಡಲೆಂದೋ
ಬಗೆದ ಭೂಮಿಯೊಡಲೊಳಗೆ ಮತ್ತೆ ಚೈತ್ರವ ತರುವುದಕ್ಕೋ
ಅಥವಾ
ಒಡಲು ಬಗೆದ ಮನುಜನಿಗೆ ಬದುಕಿನ ಪಾಠ ಕಲಿಸುವುದಕ್ಕೋ
ಗೊತ್ತಿಲ್ಲ,
ಆದರೂ, ಸುರಿಯುತ್ತಲೇ ಇದೆ… ಅಬ್ಬರಿಸಿ ಸುರಿಯುತ್ತದೆ ವರ್ಷದಾರೆ
ಹಿಂದಿನಂತೆ ಗುಡುಗು, ಮಿಂಚಿನ ಅಬ್ಬರವಿಲ್ಲ
ಆದರೂ
ಹಾನಿಯೆಸಗುವ ಮನುಜನ ಮೇಲೆ ಸಿಟ್ಟಿದೆ
ನಿಸ್ವಾರ್ಥ ಮನದಿ ಎಲ್ಲವನ್ನೂ ಕೊಟ್ಟ ಪ್ರಕೃತಿಗೆ
ಅನ್ಯಾಯ ಎಸಗುವ ಕಟುಕ ಮನದ ಮನುಷ್ಯನ ಬಗ್ಗೆ
ಎಲ್ಲಕ್ಕೂ ಉತ್ತರವಿದೆ, ಪ್ರಕೃತಿಯೇ ಕೊಡುತ್ತದೆ ವಿಕೋಪಗಳ ರೂಪದಲ್ಲಿ
ಏಕೆಂದರೆ
ಮಾಡಿದ ಪಾಪದ ಲೆಕ್ಕ ಜಮೆಯಾಗಿರುತ್ತದೆ ಚಿತ್ರಗುಪ್ತನ ಪುಸ್ತಕದಲ್ಲ
ಭುವನ ಬಾಬು